ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ವಿವೇಕಾಮೃತ ಸಿಂಚನ ಕಾರ್ಯಕ್ರಮವು ನಡೆಯಿತು. ವಿವೇಕಾನಂದರ ವೇಷಧರಿಸಿದ ವಿದ್ಯಾರ್ಥಿಗಳು ವಿವೇಕವಾಣಿ ಉದ್ಘೋಷಿಸಿದರು. ಕಾರ್ಯಕ್ರಮದಲ್ಲಿ ಡಿವೈನ್ ಪಾರ್ಕ್ ಸಾಲಿಗ್ರಾಮ ಉಡುಪಿ ಇದರ ಮಹಿಳಾ ಮೇಲ್ವಿಚಾರಣಾ ಅಧಿಕಾರಿ ಪ್ರೇಮ ಪ್ರಭಾಕರ್, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮತ್ತು ವಿವೇಕಾನಂದರ ಆಧ್ಯಾತ್ಮಿಕ ಜೀವನ, ವೈಜ್ಞಾನಿಕ ಚಿಂತನೆ,ದೇಶ, ಧರ್ಮ ಯುವಜನಾಂಗದ ಬಗ್ಗೆ ಅವರ ಕಾಳಜಿ,ಬಡತನ ನಿರ್ಮೂಲನೆಗಾಗಿ ಅವರ ಶ್ರಮ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವಕ್ಕೆ ಸಾರಿದ ಘನತೆ ಇವೆಲ್ಲದರ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಮನಸ್ಸು ಬುದ್ಧಿ ಮತ್ತು ಚಿತ್ತ ಇವುಗಳ ಸದುಪಯೋಗ ಮಾಡಿಕೊಂಡರೆ ಎಲ್ಲರೂ ಹಂತ ಹಂತವಾಗಿ ಬೆಳೆಯುತ್ತಾ ವಿವೇಕಾನಂದರೆ ಆಗಬಹುದು ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್, ಫ್ರೌಢಶಾಲಾ ಸಹ ಸಂಚಾಲಕರಾದ ರಮೇಶ್ ಶ್ರೀಮಾನ್, ಶ್ರೀಯುತ ಸುಧಾಕರ್ ,ಶ್ರೀಯುತ ಪ್ರಭಾಕರ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ ಇವರು ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ವಿವೇಕಾನಂದ ಜಯಂತಿ
ದಿನಾಂಕ ೧೨-೧-೨೦೨೧ ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿವೇಕಾನಂದರ ೧೫೯ನೇ ಜನ್ಮದಿನವನ್ನು ಆಚರಿಸಲಾಯಿತು.
ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರೂ. ಧರ್ಮ, ತತ್ವಶಾಸ್ರ್ತ, ಇತಿಹಾಸ, ಕಲೆ, ಸಮಾಜ, ವಿಜ್ಞಾನ, ಸಾಹಿತ್ಯ ಬಲ್ಲವರಾಗಿದ್ದರು. ಶಿಕ್ಷಣದ ಜೊತೆಗೆ ಭಾರತೀಯ ಶಾಸ್ತ್ರೀಯ ಸಂಗೀತದ ಜ್ಞಾನವನ್ನು ಹೊಂದಿದ್ದರು. ನಿಜವಾದ ಭಾರತೀಯತೆಯ ಹುಡುಕಾಟದಲ್ಲಿರುವಾಗ ಇಲ್ಲಿನ ಶ್ರೇಷ್ಟತೆಯನ್ನು ಜಗತ್ತಿನಾದ್ಯಂತ ಎತ್ತಿಹಿಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು. ನಿರ್ಭಯ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಕೋನ ಹೊಂದಿದ್ದರು. ಅವರು ಯುವಕರಿಗೆ ಸ್ಪೂರ್ತಿಯಾಗುವುದರಲ್ಲಿ ಯಾವುದರಲ್ಲೂ ಕಡಿಮೆಯಿರಲಿಲ್ಲ. ಅನೇಕ ಸಂದರ್ಭದಲ್ಲಿ ಅವರು ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಅದಕ್ಕಾಗಿಯೇ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಇಂದಿನ ಯುವ ಸಮೂಹ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ತಮ್ಮ ನಿಜವಾದ ಶಕ್ತಿ ಹಾಗೂ ಗುರಿಯನ್ನು ತಲುಪಲು ವಿಫಲವಾಗುತ್ತಿದೆ. ಸ್ವಾಮಿ ವಿವೇಕಾನಂದರ ವಿವೇಚನೆ, ಭಾರತೀಯತೆ , ಮಾನವೀಯತೆಯ ನಿಜವಾದ ಅರ್ಥವನ್ನು ನಾವಿಂದು ಅಳವಡಿಸಿಕೊಳ್ಳಬೇಕಾಗಿದೆ. ಎಂದು ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕರಾದ ವೇದಾವತಿ. ಕೆ ನುಡಿದರು.
ಕಾರ್ಯಕ್ರಮದಲ್ಲಿ ೧ ರಿಂದ ೭ನೇ ತರಗತಿಯ ೧೮೦ ವಿದ್ಯಾರ್ಥಿಗಳು ವಿವೇಕಾನಂದರ ವೇಷ ಧರಿಸಿ ವೇದಿಕೆಯನ್ನು ಅಲಂಕರಿಸಿದ್ದರು. ಹಾಗೂ ಪ್ರಾಥಮಿಕ ವಿಭಾಗವು ೩೩ ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ೩೩ ವಿವೇಕಾನಂದರ ವೇಷಧಾರಿಗಳು ೩೩ ವಿವೇಕವಾಣಿಯನ್ನು ಹೇಳಿದರು.
ಅದೃಷ್ಟವಂತ ಎಂದರೆ ಅವಕಾಶಗಳನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವನು ಎನ್ನುವಂತೆ ವಿವೇಕಾನಂದರು ಬಾಲ್ಯದಿಂದಲೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾ ಆಧ್ಯಾತ್ಮ ವಿಷಯಗಳನ್ನು ಹೆಚ್ಚು ಅಧ್ಯಯನ ಮಾಡುತ್ತಾ ಸದ್ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದರು. ರಾಮಕೃಷ್ಣ ಪರಮಹಂಸರನ್ನು ಗುರುವಾಗಿ ಸ್ವೀಕರಿಸಿ, ಸ್ವಾಮಿ ವಿವೇಕಾನಂದ ಎಂಬ ನಾಮಧೇಯದಿಂದ ವಿಶ್ವ ಪ್ರಸಿದ್ಧಿಯನ್ನು ಪಡೆದರು. ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ವಿವೇಕಾನಂದರು, ಭಾರತದ ಸನಾತನ ಹಿಂದೂಧರ್ಮ, ವೇದ, ಯೋಗಗಳ ಬಗ್ಗೆ ಸಾಗರದಾಚೆಗೂ ಪ್ರಚಾರ ಮಾಡಿದ ಮೊದಲು ವ್ಯಕ್ತಿಯಾಗಿ ಪರಿಚಿತರಾದರು. ಗಟ್ಟಿಮುಟ್ಟಾದ ನೂರು ಯುವಕರನ್ನು ಕೊಡಿ, ನವ ಭಾರತವನ್ನು ನಿರ್ಮಾಣ ಮಾಡುತ್ತೇನೆ ಎಂದಿದ್ದರು. ಹಾಗಾಗಿ ಅವರ ಜನ್ಮದಿನವನ್ನು ಯವದಿನವಾಗಿ ಆಚರಿಸಲಾಗುತ್ತದೆ ಎಂದು ಭಾರತ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ವಿವೇಕಾನಂದರ ಬಾಲ್ಯ ಹಾಗೂ ಸಾಧನೆಯ ಬಗ್ಗೆ ೪ನೇ ತರಗತಿಯ ನಿನಾದ್ ಕೈರಂಗಳ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ೭ನೇ ತರಗತಿಯ ವಿದ್ಯಾರ್ಥಿಗಳು ಪ್ರೇರಣಾ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ೪ನೇ ತರಗತಿಯ ಭೂಮಿಕಾ ಸ್ವಾಗತಿಸಿ, ರಾಜೇಶ್ವರಿ ನಿರೂಪಿಸಿ, ಧಾತ್ರಿ ವಂದಿಸಿದರು.